ವಂಡಾರು: ದೇಶದ 25% ಗೇರು ಉತ್ಪಾದನೆ ಕರ್ನಾಟಕದಲ್ಲಿ ನಡೆಯುತ್ತಿದೆ – ಗೇರು ಉದ್ಯಮಕ್ಕೆ ಸರ್ಕಾರಗಳು ಸ್ಪಂದಿಸಬೇಕು – ಡಾ. ಮೋಹನ್ ಆಳ್ವಾ
ಶ್ರೀ ಕೃಷ್ಣಪ್ರಸಾದ್ ಆಗ್ರೋ ಪ್ರೈವೇಟ್ ಲಿಮಿಟೆಡ್ ನ ನೂತನ ಶಾಖೆ ಉದ್ಘಾಟನೆ




ಕುಂದಾಪುರ: ಗೇರು ತಳಿಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಗೇರು ಕೃಷಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉತ್ತೇಜನ ನೀಡಬೇಕು. ಕೇವಲ ನಿಗಮಗಳ ಮೂಲಕ ಕೆಂಪು ಗೂಟದ ಕಾರುಗಳಿಗೆ ಮೀಸಲಾಗದೇ ಗೇರು ಕೃಷಿಯನ್ನು ಕೃಷಿ ವ್ಯಾಪ್ತಿಗೆ ಒಳಪಡಿಸಿ, ಗೇಉ ಬೀಜ, ಗೇರು ಎಣ್ಣೆ, ಗೇರು ಹಣ್ಣುಗಳ ಸದ್ಬಳಕೆ ಮಾಡಲು ಸಂಶೋಧನೆಗೊಳಪಡಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವಾ ಹೇಳಿದರು.


ಅವರು ಗುರುವಾರ ವಂಡಾರಿನ ಬೋರ್ಡ್ಕಲ್ ಎಂಬಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಶ್ರೀ ಕೃಷ್ಣಪ್ರಸಾದ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಇದರ ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗೇರು ಉದ್ಯಮದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸರ್ಕಾರದ ಆರೋಗ್ಯ ವಿಮೆಯಲ್ಲಿ ಸರ್ಕಾರ ಪಾಲುದಾರಿಕೆ ನೀಡಬೇಕು ಎಂದು ಆಗ್ರಹಿಸಿದರು.




ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರಾಜ್ಯದಲ್ಲಿಯೆ ಅತೀ ಹೆಚ್ಚು ಉದ್ಯಮಗಳು ನಡೆಯುತ್ತಿರವುದು ಹೆಮ್ಮೆ. ಗೇರು ಉದ್ಯಮವಂತೂ ತಂತಿ ಮೇಲಿನ ನಡಿಗೆ. ಸ್ವಲ್ಪ ಯಾಮಾರಿದರೂ ಮೇಲೇಳುವುದು ಕಷ್ಟ. ಅಂತಹಾ ಗೇರು ಉದ್ಯಮದ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಶ್ಲಾಘನೀಯ ಎಂದರು.





ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಉದ್ಯಮದ ಯಶಸ್ಸಿಗೆ ಉದ್ಯಮಿ ಮತ್ತು ಸಿಬ್ಬಂದಿಗಳ ಸಾತ್ವಿಕ ಪ್ರಯತ್ನ ಕಾರಣ. ಸಾತ್ವಿಕತೆಯೊಂದಿಗೆ, ಮಾನವೀಯ ಮೌಲ್ಯಗಳೊಂದಿಗೆ ಸಂಪತ್ ಶೆಟ್ಟಿ ಉದ್ಯಮದೊಂದಿಗೆ ಯಶಸ್ಸು ಕಂಡಿದ್ದಾರೆ ಎಂದರು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಕೃಷ್ಣಪ್ರಸಾದ್ ಇಂಡಸ್ಟ್ರೀಸ್ ಸಂಸ್ಥೆಗೆ ದೈವಾನುಗ್ರಹವಿದೆ. ಸಾಮೂಹಿಕ ಉದ್ಯೋಗದ ಅವಕಾಶ ಸೃಷ್ಟಿಸಿದ ಈ ಸಂಸ್ಥೆ ಏಷ್ಯಾದ ದೊಡ್ಡ ಇಂಡಸ್ಟ್ರೀಯಾಗಲಿ ಎಂದರು. ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಸಂಪತ್ ಕುಮಾರ್ ಶೆಟ್ಟಿ ಅವರ ಪರಿಶ್ರಮ ಯುವಜನತೆಗೆ ಮಾದರಿ ಎಂದರು.
ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಚೇರ್ಮೇನ್ ಸಂಪತ್ ಕುಮಾರ್ ಪ್ರಾಸ್ತಾವಿಸಿದರು. ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀನಿವಾಸ್ ಅಭಿಪ್ರಾಯ ಮಂಡಿಸಿದರು.
ಇದೇ ಸಂದರ್ಭ ಪ್ಲಾಂಟ್ ಇಲೆಕ್ಟ್ರಿಕಲ್ ಇನ್ಚಾರ್ಜ್ ಅನ್ವೇಶ್ ಹಾಗೂ ಕೃಷ್ಣಪ್ರಸಾದ್ ಸ್ಟೀಲ್ಸ್ ನ ಜನರಲ್ ಮ್ಯಾನೇಜರ್ ಶ್ರೀನಿವಾಸ್ ಶೆಟ್ಟಿ ಇವರಿಗೆ ಸ್ವಿಪ್ಟ್ ಕಾರು, ಕೃಷ್ಣಪ್ರಸಾದ್ ಅಗ್ರೋ ಇಂಡಸ್ಟ್ರೀಸ್ ನ ಸೇಲ್ಸ್ ಮ್ಯಾನೇಜರ್ ಮೈಕೆಲ್ ರೋಷನ್ ಅವರಿಗೆ ಬೆಲೆನೋ ಕಾರು ಹಾಗೂ ಕೃಷ್ಣಪ್ರಸಾದ್ ಕ್ಯಾಶ್ಯೂಸ್ ನ ಪರ್ಚೇಸ್ ಹೆಡ್ ಚೈತ್ರಾ ಹಾಗೂ ಪ್ರೊಡಕ್ಷನ್ ಮ್ಯಾನೇಜರ್ ಆಶಾ ಇಬ್ಬರಿಗೆ ಮೂರು ಲಕ್ಷ ರೂ ಮೌಲ್ಯದ ಚಿನ್ನಾಭರಣ ಸೇರಿದಂತೆ ಐವರು ಸಿಬ್ಬಂದಿಗಳಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಲಾಯಿತು. ಉದ್ಯಮದ ಆರಂಭದಲ್ಲಿ ಮಾರ್ಗದರ್ಶನ ನೀಡಿದ ಶಶಿಧರ ಶೆಟ್ಟಿ, ಶಂಕರ ಶೆಟ್ಟಿ ಹಾಗೂ ನಾಗರಾಜ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಡಗುಬೆಟ್ಟು ಸಹಕಾರಿ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಕೃಷ್ಣ ಮೋಹನ್ ಮುಚ್ಚರ್ಲಾ, ಗ್ರಾಮ ಪಂಚಾಯತ್ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಮೂಡುಗಿಳಿಯಾರ್ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ವಸಂತ ಗಿಳಿಯಾರ್, ಕರ್ನಾಟಕ ಗೋಡಂಬಿ ತಯಾರಿಕಾ ಸಂಘ ಅಧ್ಯಕ್ಷ ಎ ಕೆ ರಾವ್, ವಂಡಾರಿನ ಮೆಕ್ಕೆಕಟ್ಟು ದೇವಸ್ಥಾನದ ಅರ್ಚಕ ಸುಧೀರ್ ಅಡಿಗ ಮೊದಲಾದವರು ಉಪಸ್ಥಿತರಿದ್ದರು.
