ಕುಂದಾಪುರ: ಪರಿಶಿಷ್ಟ ಜಾತಿ ಪಂಗಡಗಳ ಮೇಲಿನ ದೌರ್ಜನ್ಯ ತಡೆಗಟ್ಟಲು ಎನ್.ಪಿ.ಆರ್.ಡಿ.ಪಿ.ಟಿ ಮನವಿ
ಕುಂದಾಪುರ: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಬೇಕಾದರೆ ಪಂಚಾಯತ್ ಮಟ್ಟದಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗಬೇಕು. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಜಾಗೃತಿ ತರಬೇತಿಗಳನ್ನು ನೀಡಬೇಕು. ಆ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ನಮ್ಮ ಪ್ರಗತಿ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ (ಎನ್.ಪಿ.ಆರ್.ಡಿ.ಪಿ.ಟಿ) ಕಾಳಾವರ ಇದರ ಕಾರ್ಯದರ್ಶಿ ಮೋಹನಚಂದ್ರ ಕಾಳಾವರ ಮನವಿ ಮಾಡಿದ್ದಾರೆ.

ಈ ಬಗ್ಗೆ ಉಡುಪಿ ಜಿಲ್ಲೆಯ ವಿವಿಧ ತಾಲೂಕು ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಗ್ರಾಮ ಪಂಚಾಯತ್ ಗಳಲ್ಲಿ ಈಗಾಗಲೇ ವಿಶೇಷ ಗ್ರಾಮ ಸಭೆ ಹಾಗೂ ಶೇ. 25ರ ಅನುದಾನ ಬಳಕೆ, ಜೊತೆಗೆ ಮೊದಲ ಆದ್ಯತೆಗಳ ಮೂಲಕ ದೌರ್ಜನ್ಯ ನಿಯಂತ್ರಣಕ್ಕಾಗಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಆದರೆ ಇವುಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿಲ್ಲದಿರುವುದು ವಿಷಾದನೀಯ ಎಂದಿರುವ ಅವರು, ಪರಿಶಿಷ್ಟ ಜಾತಿ ಪಂಗಡಗಳ ಸಮುದಾಯಗಳ ಕುರಿತು ಗ್ರಾಮೀಣ ಭಾಗದಲ್ಲಿ ಇಷ್ಟು ಹಣ ಹಾಗೂ ಸಮಯ ಖರ್ಚಾದರೂ ಯಾಕೆ ನಿಯಂತ್ರಣಕ್ಕೆ ಬರಲಿಲ್ಲ ಎನ್ನುವುದರ ಕುರಿತು ಪರಿಶಿಷ್ಟ ಜಾತಿ ಪಂಗಡಗಳ ಸಮುದಾಯ ಪ್ರಶ್ನಿಸಿಕೊಳ್ಳಬೇಕಿದೆ. ಅಧಿಕಾರಿಗಳೂ ಇನ್ನಷ್ಟು ಸೃಜನಾತ್ಮಕ ಚಿಂತನೆಗಳೊಂದಿಗೆ ಸಮುದಾಯದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದೆ ಎಂದಿದ್ದಾರೆ.
ಗ್ರಾಮೀಣ ಭಾಗದಲ್ಲಿ ಎಸ್ ಸಿ ಎಸ್ ಟಿ ಸಮುದಾಯದವರು ಈಗಲೂ ಕೂಡ ಎಲ್ಲಾ ವಿಚಾರಗಳಲ್ಲೂ ಕೂಡ ವಂಚಿತರಾಗಿದ್ದಾರೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳಲ್ಲಿ ಪರಿಶಿಷ್ಟರು ಹಾಗೂ ಪರಿಶಿಷ್ಟ ವರ್ಗದವರು ಗಂಭೀರವಾಗಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಿದೆ. ಸಮುದಾಯಗಳು ಆರ್ಥಿಕ, ಸಾಮಾಜಿಕ ಸುಧಾರಣೆ ಜೊತೆಗೆ ಸುಸ್ಥಿರತೆ ಹೊಂದಬೇಕಿದೆ. ಅಲ್ಲದೇ ಜ್ಞಾನ ಕೌಶಲ್ಯ ಹೆಚ್ಚಿಸಿಕೊಳ್ಳುವಂತಹಾ ತರಬೇತಿಗಳನ್ನು ಆಯೋಜಿಸಬೇಕು ಎಂದು ಅವರು ಇಲಾಖೆಗಳನ್ನು ಆಗ್ರಹಿಸಿದ್ದಾರೆ. ಜೊತೆಗೆ ಪರಿಶಿಷ್ಟ ಜಾತಿ ಪಂಗಡಗಳ ಮೇಲಿನ ದೌರ್ಜನ್ಯ ತಡೆಗಟ್ಟಲು ಎನ್.ಪಿ.ಆರ್.ಡಿ.ಪಿ.ಟಿ ಬೆಂಬಲ ನೀಡುತ್ತದೆ ಎಂದಿದ್ದಾರೆ.