ಸಾಲಿಗ್ರಾಮ: ಕಾರಂತ ಪುರಸ್ಕಾರ – 2026ಕ್ಕೆ ರಾಮ ಮೊಗವೀರ ಕೋಟ ಅಯ್ಕೆ
ಕುಂದಾಪುರ: ಗೆಳೆಯರ ಬಳಗ(ರಿ.) ಕಾರ್ಕಡ ಸಾಲಿಗ್ರಾಮ ಇವರು ಕೀರ್ತಿಶೇಷ ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಪ್ರಯುಕ್ತ, ಪ್ರತಿ ವರ್ಷವೂ ನೀಡುತ್ತಾ ಬಂದಿರುವ ಗೆಳೆಯರ ಬಳಗ – ಕಾರಂತ ಪುರಸ್ಕಾರ – 2026 ಪ್ರಶಸ್ತಿಗೆ ಕಾರಂತರ ಆತ್ಮೀಯ ಓಡನಾಡಿಯಾಗಿದ್ದ ರಾಮ ಮೊಗವೀರ ಕೋಟ ಆಯ್ಕೆಯಾಗಿದ್ದಾರೆ.

ಬ್ಯಾಂಕ್ ಉದ್ಯೋಗಿಯಾಗಿದ್ದ ರಾಮ ಮೊಗವೀರ ಅವರು ಕೋಟ ಶಿವರಾಮ ಕಾರಂತರ ಆತ್ಮೀಯ ಒಡನಾಡಿಯಾಗಿದ್ದರು. ಬಿಡುವಿನ ವೇಳೆಯಲ್ಲಿ ಕಾರಂತರ ಜೊತೆಯಲ್ಲಿಯೇ ಇರುತ್ತಿದ್ದರು. ಅವರ ನಿಸ್ವಾರ್ಥ ಸೇವೆ ಹಾಗೂ ಒಡನಾಟವನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಗೆಳೆಯರ ಬಳಗ (ರಿ) ಕಾರ್ಕಡ, ಸಾಲಿಗ್ರಾಮ ಇದರ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ತಿಳಿಸಿದ್ದಾರೆ. ಪುರಸ್ಕಾರವು ಗೌರವಧನ ಹಾಗೂ ಸನ್ಮಾನ ಪತ್ರ, ಫಲಪುಷ್ಪ, ಶಾಲು ಇತ್ಯಾದಿಯಿಂದ ಕೂಡಿದ್ದು, ಅಕ್ಟೋ ಬರ್ 11ರ ಆದಿತ್ಯವಾರ ಸಂಜೆ ಸಾಲಿಗ್ರಾಮ ಶ್ರೀ ಗುರುನರಸಿಂಹ ಬಯಲು ರಂಗ ಮಂದಿರದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಮಾಲಿನಿ ಮಲ್ಯ, ಎಸ್. ನಾರಾಯಣ ರಾವ್, ಪೇತ್ರಿ ಮಾಧವ ನಾಯಕ್, ಶ್ರೀನಿವಾಸ ಸಾಸ್ತಾನ, ಹಿರಿಯಡ್ಕ ಗೋಪಾಲರಾವ್,ಶ್ರೀ ಎಚ್. ಇಬ್ರಾಹಿಂ ಸಾಹೇಬ್, ಪಾಂಡೇಶ್ವರ ಚಂದ್ರಶೇಖರ ಚಡಗ, ಬನ್ನಂಜೆ ಸಂಜೀವ ಸುವರ್ಣ, ವೈದೇಹಿ, ಡಾ ನಾ ಮೊಗಸಾಲೆ ಹಾಗೂ ಶಾಕುಂತಲಾ ಭಟ್ , ”ಗೆಳೆಯರ ಬಳಗ ಕಾರಂತ ಪುರಸ್ಕಾರ” ಪಡೆದುಕೊಂಡಿದ್ದಾರೆ.
