ಮನೆ ಮನೆಗೆ ಬ್ರಹ್ಮಶ್ರೀ ನಾರಾಯಣಗುರು ಜಯಂತೋತ್ಸವ – ವೀಳ್ಯ ಹಿಡಿದು ವಿಶಿಷ್ಟ ಆಚರಣೆ
ಕುಂದಾಪುರ: ಬ್ರಹ್ಮಶ್ರೀ ನಾರಾಯಣಗುರು 172 ನೇ ಜಯಂತೋತ್ಸವನ್ನು ಸಾಸ್ತಾನದ ಪಾಂಡೇಶ್ವರ ಬಿಲ್ಲವ ಯುವ ವೇದಿಕೆ ವಿಶಿಷ್ಟವಾಗಿ ಆಚರಿಸುವ ಮೂಲಕ ಬ್ರಹ್ಮ ಶ್ರೂ ನಾರಾಯಣಗುರುಗಳ ತತ್ವ ಸಿದ್ಧಾಂತ ಆದರ್ಶಗಳನ್ನು ಮನೆ ಮನೆಗೆ ತಲುಪಿಸಿ ಮಾದರಿಯಾಗಿದ್ದಾರೆ. ಪ್ರತಿವರ್ಷದಂತೆ ಈ ಬಾರಿ ಪಾಂಡೇಶ್ವರ ಉಷಾಗಣೇಶ್ ಪೂಜಾರಿ ಮನೆಯಂಗಳದಿ ಸಂಜೆ ೬ರಿಂದ ಬಾಲಾಜಿ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮದೊಂದಿ ಪ್ರಾರಂಭಗೊಂಡ ಜಯಂತ್ಯೋತ್ಸವವು ಚಂದ್ರಮೋಹನ್ ಪೂಜಾರಿ ಇವರ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳೊಂದಿಗೆ ನಡೆಯಿತು.

ಗ್ರಾಮದ ಗುರಿಕಾರ ಶೇಖರ್ ಪೂಜಾರಿ ಇವರಿಂದ ಮುಂದಿನ ವರ್ಷ ಬ್ರಹ್ಮಶ್ರೀ ನಾರಾಯಣಗುರುಗಳ ನಿತ್ಯ ಪೂಜೆ ಹಾಗೂ ಜಯಂತೋತ್ಸವ ಆಚರಣೆಯ ವಿಳ್ಯೆಯನ್ನು ಸುಧೀರ್ ಪೂಜಾರಿ ದಂಪತಿಗಳು ಸ್ವೀಕರಿಸಿದರು. ಉಪನ್ಯಾಸಕ ಅಲ್ತಾರ್ ನಾಗರಾಜ್ ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತಾಗಿ ಪ್ರಸ್ತುತ ಹಾಗೂ ಆಗಿನ ಕಾಲಘಟ್ಟದಲ್ಲಿನ ಬಿಲ್ಲವರ ಸ್ಥಿತಿಗತಿ, ನಾರಾಯಣಗುರುಗಳು ಅಸ್ಪೃಶ್ಯತೆ ವಿರುದ್ಧ ಧ್ಚನಿಯಾಗಿ ಬಿಲ್ಲವರಿಗೆ ದೇಗುಲ ಪ್ರವೇಶ ಇಲ್ಲದ ಸನ್ನಿವೇಶಗಳ ವಿರುದ್ಧ ಗುರುಗಳ ಹೋರಾಟದ ತಳಹದಿಯನ್ನು ಎಳೆ ಎಳೆಯಾಗಿ ವಿವರಿಸಿ, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವಂತಾಗಲಿ ಎಂದರು.

ಪಿಡಿಓ ಚಂದ್ರಕಾಂತ್ ಪೂಜಾರಿ ಬಿಲ್ಲವ ಯುವ ವೇದಿಕೆಯ ನಿರಂತರ ಕಾರ್ಯವನ್ನು ಶ್ಲಾಘಿಸಿದರು. ಪಾಂಡೇಶ್ವರ ಪಂಚಾಯತ್ ಮಾಜಿ ಸದಸ್ಯರಾದ ಪ್ರತಾಪ್ ಶೆಟ್ಟಿ ಸಾಸ್ತಾನ, ರವೀಶ್ ಶ್ರೀಯಾನ್, ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ರವಿಕಿರಣ ಪೂಜಾರಿ, ಸಾಸ್ತಾನ ಸಿ ಎ ಬ್ಯಾಂಕ್ ನಿರ್ದೇಶಕಿ ಲೀಲಾವತಿ ಗಂಗಾಧರ್, ಬಾರ್ಕೂರು ಬಿಲ್ಲವ ಮಹಿಳಾ ಘಟಕದ ಪ್ರಮುಖರಾದ ಜಯಂತಿ ಪೂಜಾರಿ ಮತ್ತಿತರ ಉಪಸ್ಥಿತರಿದ್ದರು. ಗುರು ಪೂಜಾ ಕುಟುಂಬದ ಉಷಾಗಣೇಶ್ ಪೂಜಾರಿ ದಂಪತಿಗಳು ವಂದಿಸಿದರು. ಬಿಲ್ಲವ ಯುವ ವೇದಿಕೆಯ ಪ್ರಮುಖ ಸುರೇಶ್ ಪೂಜಾರಿ ಪಾಂಡೇಶ್ವರ ಸ್ವಾಗತಿಸಿ ನಿರೂಪಿಸಿದರು.
