BlogCulturalEconomyEducationEntertainmentFashionHighlightsHuman storiesLifestyleLocal newsOthersReligionTop StoriesTrendingWomen Care

ಕುಂದಾಪುರ: ಚಾತುರ್ಮಾಸ ವೃತಾಚರಣೆ ಜಾತ್ಯಾತೀತ ಸಿದ್ಧತೆಗೆ ಪೂರ್ವಭಾವೀ ಸಭೆ, ಸರ್ವಪಕ್ಷಗಳ ಸಹಯೋಗಕ್ಕೆ ನಿರ್ಣಯ

Aware others:

ಕುಂದಾಪುರ: ಬೈಂದೂರು ತಾಲೂಕಿನ ಗೋಳಿಹೊಳೆಯ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಜು.29 ರಿಂದ ಸೆ.14ರವರೆಗೆ ನಡೆಯುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವೃತಾಚರಣೆಯ ಪೂರ್ವಭಾವಿ ಸಭೆಯು ಭಾನುವಾರ ಕುಂದಾಪುರದ ಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭ ಚಾತುರ್ಮಾಸ ಸಮಿತಿ ಅಧ್ಯಕ್ಷರಾದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಚಾತುರ್ಮಾಸ ಎನ್ನುವುದು ಶುದ್ಧ ಭಕ್ತಿ, ಪುಣ್ಯದ ಕಾರ್ಯ. ಇಡೀ ಸಮುದಾಯವನ್ನು ಒಗ್ಗೂಡಿಸಿಕೊಂಡು ಚಾತುರ್ಮಾಸ ವೃತ ಮಾಡುವ ಮೂಲಕ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಕೈಂಕರ್ಯ ಮಾಡುತ್ತಿದ್ದಾರೆ. 48 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಭಕ್ತಿ-ಭಯ ಸಮ್ಮಿಲನವಾಗಬೇಕಿದೆ. ಬೈಂದೂರು, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಗ್ಗೆ ಅಗತ್ಯ ತಯಾರಿ ಮಾಡಬೇಕಿದೆ. ಈಗಾಗಾಲೇ ವಿವಿಧ ಸಮಿತಿಗಳು ಸಜ್ಜಾಗಿದೆ. ಪಕ್ಷ, ಜಾತಿ ಮೀರಿ ನಡೆಯುವ ಅಭೂತಪೂರ್ವ ಧಾರ್ಮಿಕ ಸೇವೆಯಾಗಬೇಕು ಎಂದರು.

ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಬೈಂದೂರಿನಲ್ಲಿ ನಡೆಯುವ ಚಾತುರ್ಮಾಸ ಕಾರ್ಯಕ್ರಮದ ಹಿನ್ನೆಲೆ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಲ್ಲವ ಸಮಾಜದ ಅಧ್ಯಕ್ಷರೊಡಗೂಡಿ ಆಯಾಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಭೆ ನಡೆಸಿ ಪಕ್ಷಾತೀತವಾಗಿ ಜನರನ್ನು ಒಗ್ಗೂಡಿಸುವ ಕೆಲಸ ಮಾಡೋಣ ಎಂದರು.

ಚಾತುರ್ಮಾಸ ಸಮಿತಿ ಗೌರವಾಧ್ಯಕ್ಷ, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಈಗಾಗಾಲೇ ಬೈಂದೂರು ಕ್ಷೇತ್ರದ ಎಲ್ಲಾ ಭಾಗಗಳಲ್ಲಿ ಸಮಿತಿಗಳು ಸಿದ್ಧವಾಗಿದೆ. ಕುಂದಾಪುರ ತಾಲೂಕಿನ ಜನರನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಅವರ ನೇತೃತ್ವದಲ್ಲಿ ಇಲ್ಲಿನ ಶಾಸಕರೊಡಗೂಡಿ, ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಚಾತುರ್ಮಾಸ ವೃತಾಚರಣೆ ನಡೆಯಲಿದೆ ಎಂದರು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಗುರುಗಳು ಒಂದೇ ಜಾತಿ, ಮತಕ್ಕೆ ಸೀಮಿತರಾಗಿಲ್ಲ. ಸರ್ವರನ್ನೂ ಸಮಾನವಾಗಿ ಕಾಣುವ ಶ್ರೀಗಳ ಚಾತುರ್ಮಾಸ ವೃತ ಉಡುಪಿ ಜಿಲ್ಲೆಯ ಬೈಂದೂರಿನ ಪುಣ್ಯಭೂಮಿಯಲ್ಲಿ ನಡೆಯುತ್ತಿದ್ದು ಶ್ರದ್ಧಾಭಕ್ತಿಯಿಂದ ಕೈಜೋಡಿಸೋಣ ಎಂದರು‌.

ಮಹಿಳಾ ಸಂಘಟನೆಯ ಅಧ್ಯಕ್ಷೆ ಶಾಂತಾ ವಾಸುದೇವ, ಬೈಂದೂರು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ, ಪ್ರಮುಖರಾದ ಉದಯ್ ಪೂಜಾರಿ ಬೆಳ್ವೆ, ರಾಜು ಪೂಜಾರಿ ಜಡ್ಕಲ್ ಮಾತನಾಡಿದರು.

ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರದ ಉಪಾಧ್ಯಕ್ಷ ರಾಮ ಪೂಜಾರಿ ಮುಲ್ಲಿಮನೆ, ಶ್ರೀ ನಾರಾಯಣ ಗುರು ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಸಂತೋಷ್ ಪೂಜಾರಿ ಬೀಜಾಡಿ, ಕುಂದಾಪುರ, ಬೈಂದೂರು ಭಾಗದ ಬಿಲ್ಲವ ಸಮಾಜದ ಪ್ರಮುಖರು ಇದ್ದರು. ಕುಂದಾಪುರ ಬಿಲ್ಲವ ಸಮಾಜ ಸೇವಾಸಂಘದ ಪ್ರಧಾನ ಕಾರ್ಯದರ್ಶಿ ಯೋಗೇಶ್ ಪೂಜಾರಿ ಕೋಡಿ ಸ್ವಾಗತಿಸಿ, ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!