ಕುಂದಾಪುರ: ಖಾಸಗಿ ವಿದ್ಯುತ್ ಪರವಾನಿಗೆಗೆ ವಿರೋಧ: ಟಾಟಾ ಪವರ್ ಅರ್ಜಿ ರದ್ದತಿಗೆ ಶಾಸಕರಿಗೆ ಮನವಿ
ಕುಂದಾಪುರ: ಮೆಸ್ಕಾಂ ವ್ಯಾಪ್ತಿಯಲ್ಲಿ ಸಮಾನಾಂತರ ವಿದ್ಯುತ್ ವಿತರಣೆಗೆ ಟಾಟಾ ಪವರ್ ಕಾರ್ಪೊರೇಷನ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ರದ್ದುಪಡಿಸಬೇಕು ಹಾಗೂ ವಿದ್ಯುತ್ ಕ್ಷೇತ್ರದ ಖಾಸಗಿಕರಣವನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಕರ್ನಾಟಕ ವಿದ್ಯುತ್ ಮಂಡಳಿಯ ನೌಕರರು ಮತ್ತು ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಮನವಿ ಸಲ್ಲಿಸಿದರು.

ಶಾಸಕರ ಕಚೇರಿಗೆ ಭೇಟಿ ನೀಡಿದ ನೌಕರರ ನಿಯೋಗವು ವಿದ್ಯುಚ್ಛಕ್ತಿ ಕಾಯ್ದೆ 108ನೇ ಪರಿಚ್ಛೇದದ ಪ್ರಾವಧಾನ ಬಳಸಿ ರಾಜ್ಯ ಸರಕಾರವು ಟಾಟಾ ಪವರ್ ಅರ್ಜಿಯನ್ನು ರದ್ದುಪಡಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದೆ.
ರೈತರು, ಬಡವರು, ಮಧ್ಯಮ ವರ್ಗ, ಮಹಿಳೆಯರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ-ಪಂಗಡ ಹಾಗೂ ಗ್ರಾಮೀಣ ಗ್ರಾಹಕರ ಹಿತದೃಷ್ಟಿಯಿಂದ ಮತ್ತು ಮೆಸ್ಕಾಂ ನೌಕರರ ಪರವಾಗಿ ಸರಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
